
Santosh Satish
No more Badava
Graduated, CSE
"ಕಿರುಬೆರಳಷ್ಟು ದಪ್ಪ, ನಡು ಬೆರಳಷ್ಟು ಉದ್ದ
ಸಂಪಾದಕ ಮಂಡಳಿಯೆಂಬ ಮುಷ್ಟಿಯಲ್ಲಿ,
ಅವನು ಆರ್ಟ್ಸ್ ಅಂಡ್ ಗ್ರಾಫಿಕ್ಸ್ಗೆ ಕರ್ಮ ಬದ್ಧ.
ದುಂಬಿಯನ್ನು (bumble bee) ತನ್ನ ವಾಹನವಾಗಿಸಿಕೊಂಡು,
ಬಣ್ಣದ ಕುಂಚವನ್ನು ಅಸ್ತ್ರವಾಗಿಸಿಕೊಂಡು,
ನಿಂತಿಹನವನೇ ಅದೊ ನಮ್ಮ ವೀರಯೋದ್ಧ.
ಮೊಗದಲ್ಲಿ ಒಂದು ಮುಗುಳುನಗೆಯ ಸ್ಥಾಯಿ ಭಾವ,
ಗಟ್ಟಿಮುಟ್ಟಾದರೂ ನೋಡಲು ಅತೀ (ಇಇಇ)... ಕೃಶಕಾಯ
ಇವನೇ ಶ್ರೀಮಾನ್ ಸಂತೋಷ ಸತೀಶ ಮಹರಾಯ"
ವ್ಯಕ್ತಿಯೊಬ್ಬ ಕಿರಾತಕನಂತೆ ಕಂಡು ಬಂದರೂ (ಒಂದೊಮ್ಮೆಯಷ್ಟೇ) ಮೊಗ್ಗಿನ ಮನಸ್ಸಿನ ಪೋರ, ಸಂತು. ತನ್ನ ಸಿಹಿಯಾದ ಮಾತುಗಳಿಂದ ಸರ್ವರ ಪ್ರೀತಿಪಾತ್ರ. ಆದರೆ ಇವನು ಸಿಹಿ ತಿನಸುಗಳಿಂದ ದೂರ ಓಡುವನಂತೆ. ಎಲ್ಲರಿಗೂ ಸಾಕಷ್ಟು ಪ್ರೀತಿಯನ್ನು ಹೃದಯದಲ್ಲಿ ಇಟ್ಟುಕೊಂಡು, ಯಾರಿಗೂ ಬೇಸರವಾಗದಂತೆ ತನ್ನ ಪಕ್ಷವನ್ನು ಪ್ರಕಟಿಸುವ ಸ್ವಭಾವವಿವನದು. ಅದೆಷ್ಟೇ ಕಷ್ಟ ಪಟ್ಟರೂ ನಿದ್ದೆ ಹತ್ತದೆಂದು ರಾತ್ರಿಯನ್ನು ತನ್ನ ಯಂತ್ರಗಳೊಂದಿಗೆ ಕೂಡಿ, ಆಡಿ ಕಳೆಯುವನು. ಗೋಧಿ ಬಣ್ಣ ಸಾಧಾರಣ ಮೈಕಟ್ಟಿನ ಇವನು, ಕನ್ನಡ, ಇಂಗ್ಲಿಷ್, ಹಾಗು ಸ್ವಲ್ಪ ತೆಲುಗು ಮಾತಾಡಬಲ್ಲ. ತನ್ನ ಕನ್ನಡಕದ ಅಂಚುಗಳ ಮೇಲೆ ದೃಷ್ಟಿ ಇರಿಸಿ, ಯಾರನ್ನಾದರೂ ಸುಲಭವಾಗಿ ಬೆದರಿಸಬಲ್ಲ. ಅಷ್ಟೋ ಇಷ್ಟೋ ಹೊಟ್ಟೆಗೆ ಹಾಕಿಕೊಂಡು ದಿನವಿಡೀ ಸಂಪೂರ್ಣ ಶಕ್ತಿಯೊಂದಿಗೆ ತನ್ನನ್ನು ಕೆಲಸಗಳಿಂದ ಕೂಡಿಸಿಕೊಂಡು, ಎಲ್ಲರ ಜೊತೆ ಹರಟೆ ಹೊಡೆಯಲು ಇವನಿಗೆ ಇಷ್ಟ. ತಿಂಡಿಗಳಲ್ಲಿನ ವಿವಿಧ ಸಂಯೋಜನೆಗಳನ್ನು ಆಸ್ವಾದಿಸುವನಾದರೂ, ದಪ್ಪ ಆಗದ ಇವನ ಗುರಿ 'ಈಗ ಹೇಗಾದರೂ ದಪ್ಪ ಆಗಬೇಕು' ಎಂದು. ಚೀಟೋಸ್ ಹಾಗು ಹಾಲಿನ ಮಿಶ್ರಣವನ್ನು ಆಸ್ವಾದಿಸುವನು. ಮಾಂಗ, ಹೈಕ್ಯೂ, ಎಮೊಬಾಯಿ, ಎಂದೆಲ್ಲ ಜಾಲತಾಣದ ಮೂಲೆ ಮೂಲೆಯಿಂದ ವಿಷಯಗಳನ್ನು ಹುಡುಕಿ ಅದರಲ್ಲಿ ಆಸಕ್ತಿಯನ್ನು ತನ್ನಲ್ಲಿಯೂ, ಪರರಲ್ಲಿಯೂ ಹೆಚ್ಚಿಸುವ ಇವನು, ಮೊಂಗೋಲಿಯನ್ ಹಾಡುಗಳನ್ನು ನಮ್ಮ ನಡುವೆ ಪರಿಚಯಿಸಿದನು. ನೆನಪು ಅಷ್ಟೊಂದು ತೀಕ್ಷ್ಣವಲ್ಲದಿದ್ದರೂ ತನ್ನವರ ಬಗ್ಗೆ ಪ್ರತಿಯೊಂದು ಮಾತನ್ನು ಅಚ್ಚುಕಟ್ಟಾಗಿ ನೆನಪಿನಲ್ಲಿ ಇಟ್ಟುಕೊಳ್ಳುವನು. ಅದೇಕೋ ಗೊತ್ತಿಲ್ಲ ನಲವತ್ತರ ನಂತರ ಜೀವಿಸುವುದು ಬೇಡವೆನ್ನುತ್ತಿರುತ್ತಾನೆ. ಏಕೆಂದು ಕೇಳಿದರೆ, 'ಜೀವನದಲ್ಲಿ ಜಿಗುಪ್ಸೆ' ಎಂಬ ನುಡಿಗಟ್ಟನ್ನು ಕಾರಣ ಎಂದು ಅಂಟಿಸಿ, ಕೈ ತೊಳೆದುಕೊಳ್ಳುವನು. ಅದಕ್ಕೆ ಈಗಲೇ ಅವನನ್ನು ಅಜ್ಜ ಎಂದು ಕರೆದು ಆ ಒಂದು ಫೀಲ್ ಅನ್ನು ಅವನು ಮಿಸ್ ಮಾಡಿಕೊಳ್ಳದಂತೆ ನಾವು ನೋಡಿಕೊಂಡಿದ್ದೇವೆ.
ಇವನ ಮತ್ತು ಬಣ್ಣದ ಪ್ರಸಂಗ ಒಂದು ನಿಮಗೆ ಹೇಳಲೇ? ವರ್ಣ ರಂಜಿತಾ ಪತ್ರಗಳನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ‘ಇನ್ನ್ಯಾವ ಬಣ್ಣವು ಇದಕ್ಕೆ ಹಾಕಲಿ?’ ಎಂದು ಆಲೋಚಿಸುತ್ತಾ ಹಾಗೆಯೇ ಕೈಯಲ್ಲಿನ ಕುಂಚವನ್ನು ಬಾಯಿಯೊಳಗೆ ಹಾಕಿಕೊಂಡು ವರ್ಣದ ರುಚಿಯನ್ನು ಸವಿದ ಇವನು ನಮ್ಮ ಸಂಪಾದಕರ ಬರಹಕ್ಕೆ ಹಾಕುವ ಚಿತ್ರಗಳು-ಅದೊಂದು ಸುಂದರ ದೃಶ್ಯ.
ನೀರು, ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಸುಂದರವಾಗಿ ಬರೆಯುವ ಈ ವ್ಯಕ್ತಿ ಈಜಲು ಅರಿಯನು. ಆದ್ರೆ ಎಲ್ಲಿಯಾದರೂ ಹೊಡೆಯಲು ಹೊರಟಿರೋ? ಜಾಗ್ರತೆ ವಹಿಸಿ! ಕರಾಟೆಯಲ್ಲಿ ಕಪ್ಪು ಪಟ್ಟಿ ಪಡೆದ ಇವನು ತನ್ನ ಎಲುಬುಗಳ ಬಳಕೆಗೆ ಇಳಿದರೆ ಮತ್ತೆ ಆಸ್ಪತ್ರೆಯೇ ಗತಿ. ಮತ್ತೊಮ್ಮೆ ಜಾಗ್ರತೆ! ಈ ವ್ಯಕ್ತಿಯು ನಮ್ಮ ಜೆ. ಎಸ್. ಎಸ್. ಆವರಣದೊಳು ಕಂಡು ಬಂದಲ್ಲಿ ನೀವು ಭಯ ಪಡಬೇಕಾದ ಅಗತ್ಯವಿಲ್ಲ. ಏಕೆಂದರೆ ನಿಮ್ಮ ಸಹಾಯಕ್ಕೆ ತತ್ಪರನಾಗಿ ತನ್ನಿಂದಾಗುವ ಪರೋಪಕಾರಕ್ಕೆ ಇವನು ಸದಾ ಸಿಧ್ಧ. ಧೈರ್ಯವಾಗಿ ಅವನಲ್ಲಿ ಮಾತಾಡಿ. ಜೈ!