
Aditya Rajaram Hegde
Arama
Graduated, CSE
ಪ್ರಕೃತಿಯನ್ನೇ ತನ್ನ ಆರಾಧ್ಯದೈವವಾಗಿಸಿಕೊಂಡು, ಬೆವರು ಸುರಿಸಿ, ದುಡಿದು, ಭೂತಾಯಿಯನ್ನು ಒಲಿಸಿಕೊಂಡು, ತನ್ನ ಅಡಿಕೆ ತೋಟದಲ್ಲಿ ಮೈಸೂರು ವೀಳ್ಳೆದೆಲೆಯನ್ನು ಬೆಳೆಸಲು ಮೈಸೂರಿಗೆ ಬಂದಿಳಿದ ಮಲ್ನಾಡಿನ ಕುವರ, ಆದಿತ್ಯ ರಾಜಾರಾಮ ಹೆಗ್ಡೆ ಉರುಫ್ ನಮ್ ಆದಿ ಭೈ.
ತನ್ನನ್ನು ತಾನು 'ಆರಾಮ' ಎಂದು ಕರೆದುಕೊಂಡು ಬೇಜಾನ್ ಆರಾಮ್ ಮಾಡ್ತಾನೆ. ಆದರೆ ಆರಾಮ್ ಮಾಡ್ಮಾಡ್ತಾನೆ ಯಾವ ಗ್ಯಾಪ್ಲ್ಲಿ ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ, ನಿದ್ರಾದೇವಿಗೆ ಶರಣಾಗುತ್ತಾನೆಂದು ತಿಳಿಯದು. ಆದರೆ ಕ್ರಿಕೆಟ್ ಪಂದ್ಯಗಳು ನಡೀತಿರ್ಬೇಕಾದರೆ ಮಾತ್ರ, ನಿದ್ರೆಗೆ ಟಾಟಾ ಬಾಯ್-ಬಾಯ್ ಹೇಳಿ, ಕಣ್ಣಿಗೆ ಎಣ್ಣೆ ಬಿಟ್ಕೊಂಡು ಪಂದ್ಯಗಳನ್ನು ನೋಡುತ್ತಾನೆ. ಇತ್ತೀಚಿಗಷ್ಟೇ ತನ್ನ ಸಹಸಂಪಾದಕ ಹರ್ಷನಿಂದ ಒಂದು ನಾಯಿಮರಿಯನ್ನು ಪಡೆದುಕೊಂಡ ಇವ, ಶ್ವಾನ ಪ್ರಿಯ ಮಾತ್ರವಲ್ಲದೆ, ಮಾರ್ಜಾಲ ಪ್ರಿಯನೂ ಹೌದು.
ಹಿರಿಯ ಸಂಪಾದಕರೊಬ್ಬರು ಸಹಜವಾಗಿ "Frustration against what maccha?" ಎಂದು ಕೇಳಿದಾಗ, "Against the society" ಎನ್ನುತ್ತಾ ಇಂದಿನ ಸಮಾಜದ ಬಗೆಗಿನ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದ ಆದಿ, ನೇರ ನುಡಿಯುವ ಕಠೋರವಾದಿ. ಈ ಕಠೋರತನಕ್ಕೆ ತನ್ನ ಜೀವನದಲ್ಲಿ ಆದ ಅನುಭವಗಳೇ ಕಾರಣವಂತೆ. ಜೀವನೋತ್ಸಾಹವನ್ನು ಕುಗ್ಗದಂತೆ ನೋಡಿಕೊಳ್ಳಲು ಆದಿ ಭೈಯಿಂದ ಸಲಹೆ- "ಜೀವನದಲ್ಲಿ ಬೇಜಾರ್ ಮಾಡ್ಕೊಂಡು ಕೂತರೆ, ಬರಿ ಬೇಜಾರೇ ಇರುತ್ತೆ. ಇದಕ್ಕೆಲ್ಲ ತಲೆಗೊಡ್ಬೇಡಿ. ನಿಮ್ಮ ಅನುಭವಗಳೇ ನಿಮಗೆ ಪಾಠ ಕಲಿಸುತ್ತೆ. ಅದೆ ನಿಮ್ಮ ಭವಿಷ್ಯವನ್ನು ರೂಪಿಸುತ್ತೆ. Just go with the flow⚔️". ಇರುವ ಸಮಯವನ್ನು ವ್ಯರ್ಥಗೊಳಿಸದೆ, ಖಾಲಿ ಕೈಯಲ್ಲಿ ಕೂರುವ ವ್ಯಕ್ತಿನೇ ಅಲ್ಲ. ಸಮಯದ ಸದುಪಯೋಗ ಪಡಿಸಿಕೊಳ್ಳುತ್ತಾ, ಏನಾದರು ಹೊಸದನ್ನು ಕಲಿಯುತ್ತಾ ಇರುವುದರ ಜೊತೆಗೆ, ಬೆರೆಯವರಿಗೂ ಕಲಿಸಿಕೊಡುತ್ತಾನೆ. ತೊಗೊಳಿ, ನಮ್ ಆದಿ ಭೈಯಿಂದ ಮತ್ತೊಂದು ಟಿಪ್, "ಯಾವುದಾದರು ಹೊಸ ವಿಷಯ ಕಲಿಬೇಕೆಂದರೆ, UDemy ಅಥವಾ Coursera ಹೋಗ್ಬೇಡಿ. ಸೀದ ಯೂಟ್ಯೂಬ್ಗೆ ಹೋಗಿ ಕಲಿರಿ. ಬೇಜಾನ್ ವಿಡಿಯೋಸ್ ಸಿಗುತ್ತೆ".
ಹುಟ್ಪುಹಬ್ಬವೆಂದರೆ ಕೇಕ್ ಕತ್ತರಿಸಿ ಸಂಭ್ರಮಿಸುವುದು ಸಹಜ. ಆ ಕೇಕ್ ಬಾಯಿಗೆ ಹೋಗದೆ, ಮುಖಕ್ಕೆಲ್ಲಾ ಮೆತ್ತಿಸಿಕೊಳ್ಳುವುದೂ ಉಂಟು. ಆದರೆ ಇಲ್ಲಿ ಸನ್ನಿವೇಶ ಸ್ವಲ್ಪ ಬೇರೆನೇ ಇದೆ. ಆದಿ ಭೈ ಶರೀರಕ್ಕೆ ಕೇಕ್ನ ಒಂದು ಚೂರೂ ಸೋಕಿಸಬಾರದಂತೆ. ಆದರೆ ಅವನು ಮಾತ್ರ ತನ್ನ ಗೆಳೆಯರ ಮುಖ-ಮೂತಿ ಎಂದು ನೋಡದೆ, ಕೇಕ್ನ ಮೆತ್ತಿ ಮೆತ್ತಿ ಇಡ್ಬೇಕಂತೆ.
ಭೈನ ನೀವು ನೋಡ್ಬೇಕಂದರೆ, ಯಾಂಪಗೆ ಬನ್ನಿ. ಬಾಳ ಪಸಂದಾಗಿದೆ ಅಂತ, ಒಂದ್ ಕೈಯಲ್ಲಿ ದಿಲ್ ಪಸಂದ್, ಮತ್ತೊಂದು ಕೈಯಲ್ಲಿ ಟೀ ಹೀರುತ್ತಾ ಸಿಗುವನು. ಆದರೆ, ಇಂಟರ್ನಲ್ಸ್ ಮುಗ್ದಿದ್ ಕೂಡಲೇ, ಇವನ ಕೈಗೆ ಸಿಕ್ಕಾಕಿಕ್ಕೊಳ್ಳಬೇಡಿ. ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ತಾಳೆ ಹಾಕಲು ಪ್ರಾರಂಭಿಸುತ್ತಾನೆ.
ಇವನ ಹಾಗೂ ಇವನ ಗೆಳೆಯನೊಬ್ಬನ ಜಗಳ ನೋಡೋದೆ ಒಂದು ಮಜಾ. ಅವನದ್ದು ಹರ್ಕು-ಮುರ್ಕು ಕನ್ನಡ. ಇವನದ್ದು ಹರ್ಕು-ಮುರ್ಕು ಹಿಂದಿ. ಇವರಿಬ್ಬರು ಅವರವರ ಭಾಷೆಯಲ್ಲಿ ಸ್ವಲ್ಪ ಹೊತ್ತು ಬೈದಾಡಿಕೊಂಡ ನಂತರ, ಏನು ಆಗೇ ಇಲ್ಲ ಎಂಬಂತೆ ಕ್ಲೋಜೋ ಕ್ಲೋಜು. ಅದನ್ನು ನೋಡಿದ ನಾವು ಬೆಪ್ಪೊ ಬೆಪ್ಪು. 'ಕನ್ನಡ್ ಗೊತ್ತಿಲ್ಲ' ಎಂದು ಹೇಳುವವರೆಲ್ಲರಿಗು, ಕನ್ನಡ ಕಲಿಸಿಕೊಡುವ ಛಾತಿ ಇವನದ್ದು. ಅಪ್ಪಟ ಕನ್ನಡ ಭಾಷಾಭಿಮಾನಿಯಾದ ಆರಾಮನ ಬರವಣಿಗೆಯಲ್ಲಿ, ಅವನ ಶುದ್ಧ ವ್ಯಾಕರಣದ ಪ್ರಯೋಗ ಹಾಗೂ ಭಾಷೆಯ ಮೇಲಿನ ಹಿಡಿತವನ್ನು ಕಾಣಬಹುದು. ಅವನು, ಭಾವನಾತ್ಮಕ ಜೀವಿ ಆಗದಿದ್ದರೂ, ಅವನ ಲೇಖನಗಳು, ಓದುಗರನ್ನು ಭಾವುಕರನ್ನಾಗಿಸುತ್ತದೆ. 'ಇದು ನಿಮ್ಮ ಅನುಭವದ ಲೇಖನಗಳಾ?' ಎಂದು ಪ್ರಸ್ನಿಸಿದರೆ, "ಇಲ್ಲ ಗುರು, ಎಲ್ಲಾ ಬರಿ ರೀಲು" ಎನ್ನುವನು. (ನೀವೇ ಅವರ ಲೇಖನ ಓದಿ, ನಿಮಗೇ ಗೊತ್ತಾಗುತ್ತೆ).
ಒಂದು ಕಾಲದಲ್ಲಿ ಭೈಗೆ ಊರ್ತುಂಬ ಫಾನ್ಸ್ ಇದ್ರಂತೆ. ಕ್ಲಾಸಿಗೆ ಅನೌನ್ಸಮೆಂಟ್ಸ್ ಮಾಡಲು ಹೋದರೆ, ಅವನು ಹೇಳುತ್ತಿದ್ದ ವಿಷಯಕ್ಕಿಂತ ಅವನನ್ನು ನೋಡೋದ್ರಲ್ಲೆ ಕಳ್ದೋಗುತ್ತಿದ್ದರಿಂದ.
ಭೈಗೆ ಚರ್ಚೆ ಮಾಡುವುದೆಂದರೆ ಬಹಳ ಇಷ್ಟ. ಇವನ ಖಡಕ್ ಪ್ರತ್ಯುತ್ತರಗಳನ್ನು ಕೇಳಿ, ಎದುರಾಳಿಯು ತತ್ತರಿಸುವರು. ರಸಪ್ರಶ್ನಾ ಕಾರ್ಯಕ್ರಮಗಳನ್ನು ಆಯೋಜಿಸುವುದೆಂದರೆ ಇವನಿಗೆ ತುಂಬಾ ಇಷ್ಟ. ಪ್ರಚಲಿತ ವಿದ್ಯಮಾನ ತಿಳಿದುಕೊಳ್ಳುವುದರಲ್ಲಿ ನಿಷ್ಣಾತನಾದ ಈತನು, ಪ್ರಶ್ನೆಗಳನ್ನು ಹೆಕ್ಕಿ ಹೆಕ್ಕಿ ತರ್ತಾನೆ. ಸ್ಪರ್ಧಾರ್ಥಿಗಳು ಹಂತ-ಹಂತ ದಾಟಿದಂತೆ, ಇವನ ಉತ್ಸಾಹ ಕೂಡ ಇಮ್ಮಡಿಸುತ್ತದೆ.